![]() |
ಬದುಕಿನ ಅರ್ಧಶತಮಾನ ಪೂರೈಸಿದ ಸಂದರ್ಭದಲ್ಲಿ ನನ್ನ ಬಾಲ್ಯದ ದಿನಗಳನ್ನು ಒಮ್ಮೆ ಹಿಂದಿರುಗಿನೋಡಿದರೆ ಅಲ್ಲಿ ನನಗೆ ಸಂತೋಷ ಕೊಡುವುದು ನನ್ನ ಶಾಲಾದಿನಗಳೆ. ನನ್ನ ಮಾಧ್ಯಮಿಕ ಹಾಗೂ ಪ್ರೌಢಶಾಲಾದಿನಗಳು ಮತ್ತೆ ಮರಳಿ ಬಾರವೇ ಎಂಬ ವಿಷಾದವೂ ಮನಸ್ಸನ್ನು ತುಂಬುತ್ತದೆ. ಸಾಮಾನ್ಯವಾಗಿ ಎಲ್ಲರೂ ಕಾಲೇಜಿನ ದಿನಗಳನ್ನು ಬಂಗಾರದ ದಿನಗಳು ಎನ್ನುತ್ತಾರೆ. ನನಗೆ ಮಾತ್ರ ನನ್ನ ಹೈಸ್ಕೂಲ್ ದಿನಗಳೆ ಬಂಗಾರದ ದಿನಗಳು. ಒಬ್ಬ ಶಿಕ್ಷಕಿಯ ಮಾತಿನಿಂದ ಟೀಚರ್ ಅಗಲೇ ಬಾರದೆಂದು ನಿರ್ಧರಿಸಿದ್ದ ನಾನು ಅದೇ ಶಾಲೆಯ ಮತ್ತೊಬ್ಬ ಶಿಕ್ಷಕರ ಪಾಠದಿಂದ ಶಿಕ್ಷಕ ವೃತ್ತಿಯನ್ನು ಮನದಾಳದಲ್ಲೇ ಇಷ್ಟಪಟ್ಟಿದ್ದೆನೇನೋ. ಆದರೆ ಅದು ನನಗೆ ಅರ್ಥವಾಗಿದ್ದು ಎಷ್ಟೋ ವರ್ಷಗಳ ನಂತರ.
ನನ್ನ ಶಿಕ್ಷಕರನ್ನು ನೆನೆದುಕೊಳ್ಳುವಾಗ ಮೊದಲು ಹೇಳಬೇಕಾದ ಹೆಸರು ದಾವಣಗೆರೆಯ ಸೆಂಟ್ ಪಾಲ್ಸ್ ಕಾನ್ವೆಂಟಿನ ಕನ್ನಡ ಪಾಠ ಮಾಡುತ್ತಿದ್ದ ಕನ್ನಡ ಪಂಡಿತರು. ಅವರ ಹೆಸರು ನಂಜಪ್ಪ ಮಾಸ್ತರು. ನಾನು ಕನ್ನಡ ಆನರ್ಸ್ ಓದಿ ಎಂ.ಎ. ಮುಗಿಸಿ ಕನ್ನಡ ಉಪನ್ಯಾಸಕಿ ಆಗಲು ಅವರೇ ಪರೋಕ್ಷ ಕಾರಣ ಎಂದು ಈಗ ಅನಿಸುತ್ತದೆ. ಅವರು ಪಾಠ ಮಾಡುತ್ತಿದ್ದ ರೀತಿ ಅನನ್ಯ.ಅವರು ಪಾಠ ಮಾಡಿದ " ಜಾಬಾಲಿ ಋಷಿ ಹೇಳಿದ ಕತೆ " ಮತ್ತು " ಚಂದನದಾಸನ ಕತೆ "ಈಗಲೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗೆ ಉಳಿದಿರುವುದಕ್ಕೆ ಕಾರಣ ಆ ಮಾಸ್ತರೇ.
ನಾಗವರ್ಮನ ಕಾದಂಬರಿ ಕಾವ್ಯದಿಂದ ಆರಿಸಿದ " ಜಾಬಾಲಿ ಋಷಿ ಹೇಳಿದ ಕತೆ" ನಮ್ಮ ಪಠ್ಯಪುಸ್ತಕದಲ್ಲಿತ್ತು. ಜಾಬಾಲಿ ಋಷಿಗಳ ಆಶ್ರಮಕ್ಕೆ ಅವರ ಶಿಷ್ಯರಿಬ್ಬರು ಒಮ್ಮೆ ಒಂದು ಪುಟ್ಟಗಿಳಿಯನ್ನು ತರುತ್ತಾರೆ. ಆಗ ಜಾಬಾಲಿ ಹೇಳಿದ್ದು " ಈ ಗಿಳಿ ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದೆ". ಶಿಷ್ಯರು " ಗುರುಗಳೇ ಈ ಗಿಳಿಯ ಕತೆ ಹೇಳಿ ? ಎನ್ನುತ್ತಾರೆ. ಆಗ ಆ ಋಷಿ "ನಾಳೆ ಕತೆ ಹೇಳುತ್ತೇನೆ."ಎನ್ನುತ್ತಾನೆ. ಕುತೂಹಲದಿಂದ ಪಾಠ ಕೇಳುತ್ತಿದ್ದ ನಮಗೆ ಪಾತಾಳಕ್ಕೆ ತಳ್ಳಿದಂತಾಯಿತು. ಕಾರಣ ನಮ್ಮ ಪಾಠದಲ್ಲಿ ಅದೇ ಕಡೆಯ ವಾಕ್ಯವಾಗಿತ್ತು!! ನಾವೆಲ್ಲಾ ನಮ್ಮ ಮಾಸ್ತರರನ್ನು ಆ ಗಿಳಿಯ ಕತೆ ಏನು? ಎಂದು ಪೀಡಿಸಿದಾಗ ಅವರು ನಮಗೆ ಇಡೀ ಕಾದಂಬರಿ ಕಾವ್ಯದ ಕತೆಯನ್ನು ಸರಳವಾಗಿ ಸಂಕ್ಷಿಪ್ತವಾಗಿ ಹೇಳಿ ಮನತಣಿಸಿದ್ದರು.
ಅದೇ ರೀತಿ " ಚಂದನದಾಸನ ಕತೆ" ಹೇಳುವಾಗ ಚಾಣಕ್ಯ ಮತ್ತು ಚಂದ್ರಗುಪ್ತರ ಇಡೀ ಕತೆಯನ್ನು ಹೇಳಿ ಸ್ನೇಹಿತರೆಂದರೆ ಹೀಗಿರಬೇಕು ಎಂದಿದ್ದರು. ಇರುವಷ್ಟು ಮಾತ್ರ ಹೇಳದೆ ನಾಗವರ್ಮನ ಕಾದಂಬರಿ ಕಾವ್ಯದ ಕತೆಯನ್ನು, ಮತ್ತು " ಮುದ್ರಾರಾಕ್ಷಸ "ನ ಕತೆಯನ್ನು ಸರಳವಾಗಿ ಆದರೆ ಮನಮುಟ್ಟುವಂತೆ ಹೇಳಿದ್ದು ಆಗ ವಿಶೇಷ ಅನ್ನಿಸಲಿಲ್ಲ. ಆದರೆ ದೊಡ್ಡವರಾಗುತ್ತಾ ಅವರ ಪಾಠದ ವಿಶೇಷತೆಯ ಅರಿವು ನನಗಾಯಿತು.
ಈ ಮಾಸ್ತರರ ಜೊತೆ ಸ್ಮರಿಸಲೇ ಬೇಕಾದವರು ನಮ್ಮ ಲೆಕ್ಕದ ಸುಶೀಲಾ ಮೇಡಮ್ ಮತ್ತು ಇತಿಹಾಸ ಬೋಧಿಸುತ್ತಿದ್ದ ಬಾಲಾಮಣಿ ಮೇಡಮ್.ಆದರೆ ಬೇರೆ ಬೇರೆ ಕಾರಣಗಳಿಗಾಗಿ. ಸುಶೀಲಾ ಮೇಡಮ್ ದಾವಣಗೆರೆಯಲ್ಲಿ ಬಹುಮಟ್ಟಿಗೆ ಎಲ್ಲರಿಗೂ ಅತ್ಯಂತ ಮೃದು ಹೃದಯಿ ಎಂದೇ ಚಿರಪರಿಚಿತರು.ಕೇವಲ ಪಾಠ ಮಾಡುವುದಲ್ಲದೆ ಎಲ್ಲ ವಿದ್ಯಾರ್ಥಿಗಳಿಗೂ ತಾಯಿಯ ಸ್ಥಾನದಲ್ಲಿ ಇದ್ದವರು.ಆದರೆ ಬಾಲಾಮಣಿ ಮೇಡಮ್ ಬಗ್ಗೆ ಹಾಗೆ ಹೇಳಲಾಗದು.ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಅವರ ಹೆಸರು ಕೇಳಿದರೂ ಹೆದರುತ್ತಿದ್ದರು.ಆ ಹೆದರಿಕೆಯನ್ನು ಮೀರಿ ಕೆಲವೊಮ್ಮೆ ಗಲಾಟೆ ಮಾಡಿದರೆ ಅವರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಒಮ್ಮೆ ಅವರು ತರಗತಿಯಿಂದ ಹೊರಗೆ ಹೋಗಿದ್ದಾಗ ಯಥಾಪ್ರಕಾರ ಮಕ್ಕಳೆಲ್ಲಾ ಬಾಲವಿಲ್ಲದ ಕಪಿಗಳಂತಾಗಿದ್ದರು.ನನ್ನ ಗ್ರಹಚಾರಕ್ಕೆ ಅವರು ಕೋಣೆಯೊಳಗೆ ಬಂದಾಗ ಗಟ್ಟಿಯಾಗಿ ಮಾತನಾಡುತ್ತಿದ್ದ ನಾನು ಅವರ ಕಣ್ಣಿಗೆ ಬಿದ್ದೆ. ಸರಿ ಎಣಿಸಿದ್ದಂತೇ ಸಹಸ್ರ ನಾಮಾರ್ಚನೆಯಾಯಿತು. ಆಗ ಅವರು ಹೇಳಿದ ಒಂದು ಮಾತು ನನ್ನನ್ನು ಅನೇಕ ದಿನಗಳವರೆಗೆ ಕಾಡಿದ್ದುಂಟು.
"ನೀನು ದೊಡ್ಡವಳಾದ ಮೇಲೆ ಟೀಚರ್ ಆಗ್ತೀಯಲ್ಲ, ಆಗ ನನ್ನನ್ನು ನೆನಸಿಕೊಳ್ಳದಿದ್ದರೆ ಕೇಳು " ಎಂದು ಗುಡುಗಿದರು.
ಕೆಲವು ದಿನಗಳ ಹಿಂದೆ ನಡೆದ ಭಾಷಣ ಸ್ಪರ್ಧೆಗೆ ಬಾಲಾಮಣಿ ಮೇಡಮ್ ಜಡ್ಜ್ ಆಗಿದ್ದರು ಹಾಗು ನಾನೆ ಪ್ರಥಮ ಬಹುಮಾನ ಪಡೆದಿದ್ದೆ. ಆ ದಿನದ ಭಾಷಣದ ವಿಷಯ "ನಾನು ಶಿಕ್ಷಕಿಯಾಗಲು ಏಕೆ ಬಯಸುವೆ? " . ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸ್ಪರ್ಧೆ ಅದಾಗಿತ್ತು ! ಆ ಬಾಲ್ಯದ ದಿನಗಳಲ್ಲಿ ಅವರ ಬಯ್ಗಳಿಂದ ನನಗೆಷ್ಟು ಭಯವಾಗಿತ್ತೆಂದರೆ ಮುಂದೆ ಶಿಕ್ಷಕಿಯಾಗಲೇಬಾರದೆಂದು ಅಂದೇ ಗುಟ್ಟಾಗಿ ನಿರ್ಧರಿಸಿದ್ದೆ. ಆಶ್ಚರ್ಯವೆಂದರೆ ಮುಂದೆ ನಾನು ಅಧ್ಯಾಪಕಿಯಾಗಬೇಕಾಯಿತು. ಅದು ನನ್ನ ಮೆಚ್ಚಿನ ವೃತ್ತಿಯೂ ಹೌದು. ಅವರನ್ನು ಅನೇಕ ಬಾರಿ ನೆನಪಿಸಿಕೊಳ್ಳುತ್ತೇನೆ. ಅವರ ಶಾಪ ವರವಾದ ಬಗೆಯನ್ನು ಅಚ್ಚರಿಯಿಂದ ಮೆಲುಕುಹಾಕುತ್ತೇನೆ.
ಈ ಅಧ್ಯಾಪಕರೊಂದಿಗೆ ಇತರ ವಿಷಯಗಳನ್ನು ಬೋಧಿಸುತ್ತಿದ್ದ ಲೀಲಾ ಮೇಡಮ್, ಸಿಸ್ಟರ್ ಮೇರಿ ,ಸಿಸ್ಟರ್ Anne, ಸಿಸ್ಟರ್ ಜೆಸ್ಸಿಕ ಇವರೆಲ್ಲರೂ ಸ್ಮರಣೀಯರು.ನನ್ನ ತಂದೆ ಸರಕಾರಿ ನೌಕರರಾಗಿದ್ದರಿಂದ ಮುಂದೆ ಪದವಿಪೂರ್ವ ತರಗತಿ ತುಮಕೂರಿನಲ್ಲಾಯಿತು.ಕೇವಲ ಬಾಲಕಿಯರ ಪ್ರೌಢಶಾಲೆಯಲ್ಲಿ ಓದಿದ್ದ ನನಗೆ ತುಮಕೂರಿನ ಸರಕಾರಿ ಕಾಲೇಜು ಬಹಳ ಭಯ ಉಂಟುಮಾಡಿತು. ಆಗ ಅದು ಪದವಿ,ಪದವಿಪೂರ್ವ ,ವಿಜ್ಞಾನ, ಕಲಾವಿಭಾಗ ಎಲ್ಲವನ್ನೂ ಒಳಗೊಂಡ ಬಹು ದೊಡ್ಡ ಕಾಲೇಜಾಗಿತ್ತು.ಆ ಕಾಲೇಜನ್ನು ನೋಡಿಯೇ ನಾನು ಭಯ ಪಟ್ಟಿದ್ದೆ. ಅದಕ್ಕೆ ಸರಿಯಾಗಿ ನಾನು ಓದುತ್ತಿದ್ದ ವಿಜ್ಞಾನದ ವಿಭಾಗದಲ್ಲಿ ಅರವತ್ತು ಜನ ಬಾಲಕರ ತರಗತಿಯಲ್ಲಿ ನಾವು ಕೇವಲ ನಾಲ್ಕು ಹುಡುಗಿಯರಿದ್ದೆವು. ಹೆದರಿಕೆಯಿಂದ ಗುಬ್ಬಚ್ಚಿಗಳಂತೆ ಮುದುರಿಕೊಂಡಿರುತ್ತಿದ್ದ ನಮಗೆ ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕರ ಪಾಠ ಹೊಸ ಚೇತನ ಕೊಡುತ್ತಿತ್ತು. ಇಂಗ್ಲೀಷ್ ಅಧ್ಯಾಪಕರಾದ ಸುಭಾನ್ ಸರ್ ಅದೆಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ಇದ್ದಕ್ಕಿದ್ದಂತೆ ನನಗೆ ಇಂಗ್ಲೀಷ್ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ರವೀಂದ್ರನಾಥ ಟಾಗೋರ್ ನನ್ನ ಮೆಚ್ಚಿನ ಲೇಖಕರಾಗಿದ್ದಕ್ಕೆ ಪರೋಕ್ಷ ಕಾರಣ ಆ ಮಾಸ್ತರೇ. ನಮ್ಮ ಪಠ್ಯದಲ್ಲಿದ್ದ " ಸುಭಾ" ಎಂಬ ಪಾಠವನ್ನು ಅದೆಷ್ಟು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರೆಂದರೆ ನಾವೆಲ್ಲಾ ಆ ಸುಭಾಳ ದುಃಖದಲ್ಲಿ ಪಾಲುದಾರರಾಗಿದ್ದೆವು. ಮುಂದೆ ಪದವಿ ತರಗತಿಯಲ್ಲಿದ್ದಾಗ ಅಹೋಬಲ ಶಂಕರರ ರವೀಂದ್ರಕಥಾಮಂಜರಿಯ ಮೂರು ಭಾಗಗಳನ್ನೂ ಓದಿ ಮುಗಿಸಿದೆ. ಬಂಗಾಳ ಭಾಷೆಗೆ ಬಹು ಹತ್ತಿರವಾದ ಅನುವಾದಗಳಿವು. ಅದರಲ್ಲಿ ಸುಭಾಷಿಣಿಯ ಕತೆ ಓದಿದಾಗ ತಿಳಿಯಿತು , ಇದರ ಮುಂದೆ ಇಂಗ್ಲೀಷ್ ಅನುವಾದದ ಆ ಕಥೆ ಎಷ್ಟು ಸಪ್ಪೆಯಾಗಿತ್ತೆಂದು. ಅಂತಹ ಸಪ್ಪೆ ಪಾಠವನ್ನೇ ಆ ಮಾಸ್ತರು ರಸಭರಿತ ಕಥೆಯನ್ನಾಗಿಸಿದ್ದರು.ಅದೇ ರೀತಿ ಕನ್ನಡ ವಿಭಾಗದ ಮಾಸ್ತರುಗಳೂ ಮರೆಯಲಾಗದ ಪಾಠಗಳನ್ನು ಮಾಡಿದ್ದರು.
ಬಹುಶಃ ನನಗೇ ಅರಿವಿಲ್ಲದಂತೆ ಬಾಲ್ಯದಿಂದ ನನಗೆ ಸಾಹಿತ್ಯ ಮೆಚ್ಚುಗೆಯ ವಿಷಯವಾಗಿತ್ತೆನಿಸುತ್ತದೆ. ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕಗಳು ಬಂದಿತ್ತೆಂದು ಮುಂದೆ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡೆ. ಆದರೆ ಈಗ ಅದರ ಒಂದು ಪಾಠವೂ ನೆನಪಿಲ್ಲ. ಮುಂದೆ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳನ್ನು ಓದುವಾಗ ರಂ.ಶ್ರೀ. ಮುಗಳಿ, ಡಾ. ಜಿ.ಎಸ್.ಶಿವರುದ್ರಪ್ಪ , ಚಂದ್ರಶೇಖರ ಕಂಬಾರ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು, ಚಿದಾನಂದಮೂರ್ತಿ, ಮುಂತಾದವರ ಪಾಠ ಕೇಳುವ ಅವಕಾಶ ಒದಗಿತು.
ನನ್ನ ಎಲ್ಲ ಶಿಕ್ಷಕರಿಗೂ ಈ ಮೂಲಕ ಕೃತಜ್ಞತೆಗಳನ್ನು ಮತ್ತು ಶಿಕ್ಷಕರ ದಿನದ ಶುಭಾಶಯಗಳನ್ನು ಅರ್ಪಿಸುವೆ. ಇವರೆಲ್ಲರ ಜೊತೆ ಮತ್ತೊಬ್ಬರನ್ನು ನಾನು ನೆನೆಯಲೇ ಬೇಕು. ಕವನ ಓದುವುದು ಹೇಗೆ? ಅದನ್ನು ವಿಶ್ಲೇಷಿಸುವುದು ಹೇಗೆ? ಮುಂತಾದ ಅನೇಕ ಸೂಕ್ಷ್ಮಗಳನ್ನು ನನಗೆ ಮನದಟ್ಟು ಮಾಡಿ ನಾನು ಅಧ್ಯಾಪಕಿಯಾಗಲೊಲ್ಲೆ ಎಂದಾಗ ಅದು ನನ್ನಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಮೂಡಿಸಿದ , ಕನ್ನಡ ಪ್ರಾಧ್ಯಾಪಕರಾದ ನನ್ನವರಿಗೆ ಈ ಶಿಕ್ಷಕರ ದಿನದಂದು ಶುಭ ಹಾರೈಕೆ.

