Friday, December 12, 2008

ನೆನಪು....ಸವಿ ಸವಿ !!!??

ಹೊಸ ಬಟ್ಟೆ ಧರಿಸಿ , ನಗೆಚೆಲ್ಲುತ್ತಾ ಸಂಭ್ರಮದಿಂದ ಮನೆಯೆಲ್ಲಾ ಓಡಾಡುತ್ತಿರುವ ಹತ್ತು ವರ್ಷದ ಆ ಬಾಲೆಯ ಚಿತ್ರ ಸುಮಾರು ಮೂವತ್ತು ವರ್ಷಗಳಿಂದ ಪ್ರತಿ ದೀಪಾವಳಿಯಂದು ಅವಳ ಕಣ್ಮುಂದೆ ತಪ್ಪದೆ ಮೂಡುತ್ತದೆ..ಆ ಬಾಲೆಯ ಹೆಸರು ಶಶಿ.ಆ ದಿನ ಅವಳು ಹುಟ್ಟಿದ ದಿನವೂ ಹೌದು...

ಹತ್ತು ವರ್ಷದ ಶಶಿಯ ಸಂಭ್ರಮಕ್ಕೆ ಮತ್ತೊಂದು ಕಾರಣವೂ ಇದೆ.ಪಟ್ಟಣದಲ್ಲಿ ಓದುತ್ತಿದ್ದ ಹಿರಿಯಣ್ಣ ಉತ್ತರ ಭಾರತ ಪ್ರವಾಸ ಮುಗಿಸಿಕೊಂಡು, ಊರಿಗೆ ಬಂದಿದ್ದಾನೆ. ಹಬ್ಬ ಮುಗಿಸಿಕೊಂಡು ಪಟ್ಟಣಕ್ಕೆ ಹಿಂತಿರುಗುವ ಕಾರ್ಯಕ್ರಮ ಅವನದು.ಮನೆಯವರಿಗೆಲ್ಲ ಸಿಹಿ ತಿನಿಸು, ಪುಟ್ಟ ತಂಗಿ ಶಶಿಗಾಗಿ ಬಣ್ಣದ ಮಣಿಸರ, ಹಾಗೂ ಬಳೆಗಳನ್ನು ತಂದಿದ್ದಾನೆ. ಅಪ್ಪ ತಂದಿರುವ ಮತಾಪು ,ಸುರ್ ಸುರ್ ಬತ್ತಿ, ಹೂವಿನ ಕುಂಡಗಳು,ಭೂಚಕ್ರ, ವಿಷ್ಣು ಚಕ್ರಗಳ ದೊಡ್ಡ ಬುಟ್ಟಿಯೇ ಮನೆಯಲ್ಲಿದೆ.ಉಹೂ, ಅವಳ ವಿಶೇಷ ಸಂಭ್ರಮಕ್ಕೆ ಇದು ಕಾರಣವಲ್ಲೇ ಅಲ್ಲ. ಇವೆಲ್ಲ ಪ್ರತಿ ದೀಪಾವಳಿಯಂದು ಇದ್ದದ್ಡೇ. ಆದರೆ ಅವಳ ಸಂಭ್ರಮಕ್ಕೆ ಅವಳೊಬ್ಬಳಿಗೇ ತಿಳಿದ ರಹಸ್ಯವೊಂದಿದೆ.

ಹಿಂದಿನ ದಿನ ಅಕಸ್ಮಾತ್ತಾಗಿ ಅಣ್ಣನ ಕೋಣೆಯ ಮುಂದೆ ಹೋಗುತ್ತಿದ್ದಾಗ ಕೋಣೆಯ ತುಂಬಾ ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಅವನ ಸಾಮಾನುಗಳ ನಡುವೆ ಒಂದು ಸುಂದರವಾದ, ನುಣುಪಾದ, ವೆಲ್ವೆಟ್ಟಿನಷ್ಟೇ ಮೃದುವಾದ ಫಳ ಫಳ ಹೊಳೆಯುತ್ತಿರುವ ತಿಳಿಗುಲಾಬಿ ಬಣ್ಣದ ಫ್ರಾಕ್ ಶಶಿಯ ಕಣ್ಣಿಗೆ ಬಿತ್ತು. ಕುತೂಹಲ ತಡೆಯಲಾರದೆ ಹತ್ತಿರಹೋಗಿ ಕಣ್ಣರಳಿಸಿನೋಡುತ್ತಾಳೆ , ಅದು ತನಗಾಗಿ ಅಣ್ಣ ತಂದ ಹುಟ್ಟುಹಬ್ಬದ ಉಡುಗೊರೆ.! ಅದು ಸಾಮಾನ್ಯ ಫ್ರಾಕ್ ಆಗಿರಲಿಲ್ಲ, ತನ್ನ ತರಗತಿಯ ಅತ್ಯಂತ ಶ್ರೀಮಂತ ಹುಡುಗಿ ಮಾಲಿನಿ ಧರಿಸುವ ಡ್ರೆಸ್ ಗಳಿಗಿಂತ ಆಕರ್ಷಕವಾಗಿ ಕಾಣುತ್ತಿತ್ತು. ಶಶಿಯ ಮನಸ್ಸು ಸಂತಸದಲೆಯ ಮೇಲೆ ತೇಲಿತು. ಎಷ್ಟು ಒಳ್ಳೆಯ ಅಣ್ಣ! ಹುಟ್ಟುಹಬ್ಬಕ್ಕಾಗಿ ಇಷ್ಟು ಒಳ್ಳೆಯ ಉಡುಗೊರೆ ಇದುವರೆಗೆ ಸಿಕ್ಕಿರಲಿಲ್ಲ. ಓಡಿಹೋಗಿ ಅಮ್ಮನಿಗೆ ತಿಳಿಸಬೇಕು. ಆದರೆ ಕಾಲುಗಳು ಮುಂದೆ ಚಲಿಸಲಿಲ್ಲ. ಅಣ್ಣನಿಲ್ಲದಾಗ ಅವನ ಸಾಮಾನುಗಳನ್ನು ಸರಿಸಿನೋಡಿದೆನೆಂದರೆ ಅಮ್ಮ ಖಂಡಿತ ಬೈಯುತ್ತಾಳೆ. ಅಣ್ಣ ತನಗೆ ಕೊಡುವಾಗಲೆ ಎಲ್ಲರಿಗೂ ತಿಳಿಯಲೆಂದು ಸುಮ್ಮನಾದಳು.ಅಣ್ಣ ಏಕೆ ಇನ್ನೂ ಯಾರಿಗೂ ತೋರಿಸಿಲ್ಲ? ನಾಳೆ ಬೆಳಿಗ್ಗೆಯೇ ತೋರಿಸಬೇಕೆಂದಿರುವನೇನೋ?

ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾರಾಯಣರಾಯರ ಐದು ಜನ ಮಕ್ಕಳಲ್ಲಿ ಶಶಿಯೇ ಕೊನೆಯವಳು. ನಾಲ್ಕು ಜನ ಅಣ್ಣಂದಿರ ಮುದ್ದಿನ ತಂಗಿ. ಮನೆಯವರೆಲ್ಲರ ಕಣ್ಮಣಿ. ನಾರಾಯಣರಾಯರ ತಂದೆ, ತಾಯಿ ,ತಮ್ಮ,ತಂಗಿಯರೆಲ್ಲರೂ ಇದ್ದ ಈ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ ರಾಯರು. ಆದ್ದರಿಂದಲೇ ಸಹಜವಾಗಿಯೇ, ರಾಯರು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಉಣ್ಣುವುದಕ್ಕೆ, ಉಡುವುದಕ್ಕೆ ಕೊರತೆ ಇಲ್ಲದಿದ್ದರೂ ಅನವಶ್ಯಕ ವೆಚ್ಚಗಳೆಲ್ಲಾ ಅವರ ಪಾಲಿಗೆ ದುಂದುವೆಚ್ಚಗಳೇ. ಇದರ ಬಿಸಿ ಮನೆಯಲ್ಲಿ ಎಲ್ಲರಿಗೂ ತಟ್ಟಿತ್ತು. ಆದರೆ ಯಾರೂ ಅದನ್ನು ಮಾತಿನಲ್ಲಿ ವ್ಯಕ್ತ ಪಡಿಸುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಅಂತಹ ಅತೃಪ್ತ ಅನುಭವ ಪುಟ್ಟ ಶಶಿಗೂ ಇತ್ತು.

ಶಶಿಗೆ ಚಿಕ್ಕಂದಿನಿಂದಲೂ ಬಣ್ಣ ಬಣ್ಣದ ಉಡುಪುಗಳೆಂದರೆ ಪ್ರಾಣ. ಅದರಲ್ಲಿಯೂ ಮಾಲಿನಿ ಧರಿಸುವ ರೆಡಿಮೇಡ್ ಫ್ರಾಕುಗಳನ್ನು ನೋಡಿದಾಗಲೆಲ್ಲ ತನಗೂ ಅಂತಹ ಒಂದು ಫ್ರಾಕ್ ಬೇಕೆಂಬ ಆಸೆಯಾಗುತ್ತಿತ್ತು.ಅವರಮನೆಯಲ್ಲಿ ವರ್ಷಕ್ಕೆ ಮೂರು( ೩) ಬಾರಿ ಎಲ್ಲರಿಗೂ ಹೊಸಬಟ್ಟೆ ಸಿಗುತ್ತಿತ್ತು.ರಾಯರೇ ಅಂಗಡಿಯಿಂದ ಎಲ್ಲರಿಗೂ ಚೀಟಿ ಬಟ್ಟೆ ತರುತ್ತಿದ್ದರು. ಮನೆಗೇ ಒಬ್ಬ ದರ್ಜಿ ಬರುತ್ತಿದ್ದ. ಎಲ್ಲರ ಅಳತೆ ತೆಗೆದುಕೊಳ್ಳುತ್ತಿದ್ದ. ಎಲ್ಲರಿಗೂ ಅವರ ಅಳತೆಗಿಂತ ಒಂದೆರಡಿಂಚು ಸುತ್ತಳತೆ ಜಾಸ್ತಿ ಇರುವಂತೆ ಹೊಲಿಸುತ್ತಿದ್ದರು. ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಬೆಳೆಯುವ ಮಕ್ಕಳಿಗೆ ಬಿಗಿಬಟ್ಟೆ ಹಾಕುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ! ತನಗಂತೂ ಯಾವಾಗಲೂ ಲಂಗ ರವಿಕೆಯನ್ನೇ ಹೊಲಿಸುತ್ತಿದ್ದರು. ಎರಡು ವರ್ಷದ ಹಿಂದೆ ಹೊಲಿಸಿದ ಫ್ರಾಕೇ ಕಡೆಯದು. ಬಟ್ಟೆ ಹೊಲಿಸುತ್ತಿದ್ದ ಪುರಾಣ ಅಲ್ಲಿಗೇ ಮುಗಿಯುತ್ತಿರಲಿಲ್ಲ.ದರ್ಜಿ ಬಟ್ಟೆಗಳನ್ನು ಹೊಲಿದು ಮನೆಗೆ ತಂದಾಗ ಖುದ್ದು ರಾಯರು ಒಂದೊಂದು ಬಟ್ಟೆಯ ಎಲ್ಲ ಹೊಲಿಗೆಗಳನ್ನೂ ಪರಿಶೀಲಿಸುತ್ತಿದ್ದರು . ಅವರ ಮನಸ್ಸಿಗೆ ಸರಿಯಿಲ್ಲ ಅನಿಸಿದರೆ ಮತ್ತೆ ಹಿಂತಿರುಗಿಸುತ್ತಿದ್ದರು. ಹೀಗಾಗಿ ಒಂದೆರಡು ಬಾರಿ ರಿಪೇರಿ ಬಟ್ಟೆಗಳನ್ನು ( ಬಹುಮಟ್ಟಿಗೆ ಹೊಲಿದ ಬಟ್ಟೆಗಳೆಲ್ಲ ಅದರಲ್ಲಿದ್ದವು !) ಮನೆಗೊಯ್ದ ದರ್ಜಿ ನಂತರ ಎಲ್ಲವನ್ನೂ ಅಚ್ಚುಕಟ್ಟಾಗಿ ಹೊಲಿದು ತರುತ್ತಿದ್ದ

ಈ ಹಿನ್ನೆಲೆಯಲ್ಲಿ ಶಶಿಗೆ ಅಣ್ಣ ತಂದ ಫ್ರಾಕ್ ದಿವ್ಯ ವಸ್ತ್ರದಂತೆ ಕಂಡಿದ್ದರೆ ಆಶ್ಚರ್ಯವೇನು? ಆ ಇಡೀ ರಾತ್ರಿ ಶಶಿಗೆ ಸಂತೋಷದಿಂದ ನಿದ್ದೆ ಬರಲಿಲ್ಲ. ನಿದ್ದೆ ಬಂದಿದ್ದರೂ ಅದರ ತುಂಬಾ ಸುಂದರ ಕನಸುಗಳೇ ತುಂಬಿದ್ದವು. ಮರುದಿನ ಎಲ್ಲರೆದುರಿಗೆ ಅಣ್ಣ ಫ್ರಾಕ್ ಕೊಡುವುದನ್ನೇ ಅವಳ ಮನಸ್ಸು ನೆನಪಿಸಿಕೊಂಡು ಪುಲಕಗೊಳ್ಲುತ್ತಿದೆ.ಅಂತೂ ಆ ಬೆಳಗು ಮೂಡಿತು. ತಲೆಗೆ ಎಣ್ಣೆಸ್ನಾನವೂ ಆಯಿತು. ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವ ಶುಭ ಗಳಿಗೆಯೂ ಬಂದಿತು. ಅವರ ಮನೆಯ ಮತ್ತೊಂದು ಪದ್ಧತಿ ಎಂದರೆ ರಾಯರು ಪೂಜೆ ಮುಗಿಸಿ ಮಂಗಳಾರತಿ ಕೊಡುವಾಗ ಎಲ್ಲರೂ ಹಾಜರಿರಲೇಬೇಕು. ಆ ದಿನದ ಆಕರ್ಷಣೆ ಶಶಿ! ಮೊದಲೇ ಮುದ್ದಾಗಿದ್ದ ಹುಡುಗಿ ರಹಸ್ಯ ಸಂತೋಷದಿಂದ ಇನ್ನಷ್ಟು ಮುದ್ದಾಗಿ ಕಾಣುತ್ತಿದ್ದಳು. ಅಣ್ಣ ಕೊಟ್ಟ ಬಳೆ, ಸರಗಳು ಅವಳನ್ನು ಅಲಂಕರಿಸಿದ್ದವು. ರಾಯರು ಅವಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಎಂದಿನಂತೆ ದೇವರಿಗೆ ನೈವೇದ್ಯಕ್ಕೆ ಇಟ್ಟಿದ್ದ ದ್ರಾಕ್ಷಿ ಕೊಟ್ಟು ಅವಳ ತಲೆ ನೇವರಿಸಿ ಬಟ್ತೆ ತುದಿಗೆ ಅರಿಶಿನ ಹಚ್ಚಿದ್ದ ಹೊಸ ಬಟ್ಟೆ ಕೊಟ್ಟು ಹಾಕಿಕೊಳ್ಳುವಂತೆ ಹೇಳಿದರು. ಅವಳು ಹೂ ಎಂದು ತಲೆ ಆಡಿಸಿದರೂ ಅವಳ ಕಣ್ಣು ಅಣ್ಣನ ಮೇಲೇ ಇತ್ತು. ಅವನು ಅವಳನ್ನು ನೋಡಿ ನಕ್ಕ. ಅವಳು ನಿರೀಕ್ಷಿಸಿದಂತೆ ಅವನ ಕೈಯಲ್ಲಿ ಫ್ರಾಕ್ ಇರಲಿಲ್ಲ. ಓಹೊ ಅಪ್ಪನ ಎದುರಿಗೆ ಕೊಡಲು ಹಿಂಜರಿಯುತ್ತಿದ್ದಾನೆ! ಕಡೆಗೆ ಆವನ ಬಳಿ ಹೋಗಿ ತರುವುದೆಂದು ತೀರ್ಮಾನಿಸಿದಳು.

ನಂತರ ಎಲ್ಲರೂ ಒಟ್ಟಾಗಿ ಕುಳಿತು ಹಬ್ಬದೂಟ ಮಾಡಿದರು.ಅಷ್ಟರಲ್ಲಿ ಶಶಿಯ ಗೆಳತಿ ಜಯಾ ಬಂದು ಅವಳನ್ನು ತನ್ನ ಮನೆಗೆ ಕರೆದು ಕೊಡುಹೋದಳು. ಮತ್ತೆ ಮನೆಗೆ ಬಂದಾಗಲೇ ಅವಳಿಗೆ ಅಣ್ಣ ತಂದ ಫ್ರಾಕ್ ನೆನಪಾಗಿದ್ದು. ಓಡುವ ನಡಿಗೆಯಲ್ಲಿ ಅಣ್ಣನ ಕೋಣೆಯ ಬಳಿ ಬಂದಾಗ ಒಳಗೆ ಅಮ್ಮ ಮತ್ತು ಅಣ್ಣ ಮಾತನಾಡುತ್ತಿದ್ದುದು ಕಿವಿಗೆ ಬಿತ್ತು.

"ಮೂರ್ತಿ, ಏನೋ ಇದು, ನಾಳೆ ಊರಿಗೆ ಹೋಗ್ಬೇಕು, ಆದರೂ ಸಾಮಾನೆಲ್ಲ ಈ ತರ ಹರಡಿಕೊಂಡಿದ್ದೀಯಲ್ಲ, ಇದೇನೋ ಇದು! ಯಾರದೋ ಈ ಫ್ರಾಕು!"
ಶಶಿ ತಲೆ ಚಚ್ಚಿಕೊಂಡಳು. ಅಮ್ಮನಿಗೆ ಗೊತ್ತಾಗೋದು ಬೇಡ್ವೆ? ಅದು ನನಗಲ್ಲದೆ ಇನ್ಯಾರಿಗೆ? ಅರೆ ಇದೇನು ಅಣ್ಣ ಬೇರೇನೋ ಹೇಳುತ್ತಿದ್ದಾನೆ.
" ಬೆಂಗಳೂರಿನಲ್ಲಿ ನನಗೆ ಹಾಸ್ಟೆಲ್ ಸೀಟ್ ಕೊಡಿಸಿದರಲ್ಲಾ ಕೃಷ್ಣ ಸ್ವಾಮಿ , ಅವರ ಹೆಂಡತಿ ದುಡ್ದುಕೊಟ್ಟು ಅವರ ಮಗಳು ಸೀಮಾಗೆ ಬಾಂಬೆಯಿಂದ ಫ್ರಾಕ್ ತರೋಕೆ ಹೇಳಿದ್ದರು"
" ಹೌದಪ್ಪ, ಅವರು ಇಲ್ಲದೇ ಇದ್ದಿದ್ದರೆ ಅಥವಾ ಅವರು ಸಹಾಯ ಮಾಡದೆಇ ದ್ದಿದ್ದರೆ ನಿನಗ ಫ್ರೀ ಹಾಸ್ಟೆಲ್ ಎಲ್ಲಿ ಸಿಗುತ್ತಿತ್ತು? ಅವರ ಸೀಮಾ ನಮ್ಮ ಶಶಿ ವಾರಿಗೆ ಹುಡುಗಿ ಅನ್ನಿಸುತ್ತೆ ಅಲ್ವಾ?"
"ಶಶಿಗಿಂತ ಒಂದು ವರ್ಷ ಚಿಕ್ಕವಳು. ಆದರೆ ನಮ್ಮ ಶಶಿಯಷ್ಟು ಬಣ್ಣಾನೂ ಇಲ್ಲ ಲಕ್ಷಣಾನೂ ಇಲ್ಲ."
" ನಮ್ಮ ಶಶಿಗೂ ಇಂಥಾ ಒಂದು ಫ್ರಾಕ್ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು.. ಅಂದ ಹಾಗೆ ಈ ಫ್ರಾಕ್ ಶಶಿ ಕಣ್ಣಿಗೆ ಬೀಳದ ಹಾಗೆ ನೋಡ್ಕೋ. ಆಮೇಲೆ ಹುಟ್ಟು ಹಬ್ಬದ ದಿನ ಅವಳು ಅಳೋ ಹಾಗೆ ಆಗುತ್ತೆ. " '
ಬಾಗಿಲಿನಿಂದಾಚೆ ನಿಂತು ಕೇಳುತ್ತಿದ್ದ ಪುಟ್ಟ ಶಶಿಯ ಕಣ್ಣುಗಳಲ್ಲಿ ಧಾರಕಾರ ಕಂಬನಿ ಸುರಿಯುತ್ತಿತ್ತು. ಅದರ ಬಗ್ಗೆ ಕಟ್ಟಿದ್ದ ಸುಂದರ ಕನಸಿನ ಗೋಪುರ ಕುಸಿಯಿತು.

ಮೂವತ್ತು ವರ್ಷಗಳ ಹಿಂದಿನ ಆ ದಿನ, ಆ ಫ್ರಾಕ್ ಈಗಲೂ ಶಶಿಯ ಕಣ್ಮುಂದೆ ಬರುತ್ತದೆ. ಈಗವಳು ಶ್ರೀಮತಿ ಶಶಿ ರಾವ್, ಶ್ರೀಮಂತ ಉದ್ಯಮಿಯ ಪತ್ನಿ. ಮನೆಯಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಆದರೂ... .
"ಅಮ್ಮಾ" ಮಗಳು ರಶ್ಮಿಯ ಕೂಗು.
" ಏನು ಮಾಡ್ತಾ ಇದ್ದೀಯಾ? ಅಪ್ಪ ನಮಗೆಲ್ಲಾ ಹಬ್ಬಕ್ಕೆ ಸರ್ಪ್ರೈಸ್ ಗಿಫ್ಟ್ ತಂದಿದ್ದಾರೆ . ಬಾಮ್ಮ ನೋಡೋಣಾ."

ಅಷ್ಟರಲ್ಲಿ ಅಲ್ಲಿಗೆ ಬಂದ ರಾವ್ ಕೈಯಲ್ಲಿ ತನಗಿಷ್ಟವಾದ ಕಡು ನೀಲಿವರ್ಣದ ಮೈಸೂರ್ ಸಿಲ್ಕ್ ಸೀರೆ ಕಂಡಿತು.
ಅದನ್ನು ನೋಡಿ ತನ್ನ ಮನಸ್ಸಿಗೆ ಸಂತೋಷವಾಯಿತು. ಆದರೂ ಆಗ ತನ್ನ ಮನದಲ್ಲಿ ಉಕ್ಕಿ ಹರಿದ ಸಂತಸ ಈಗಿಲ್ಲ. ಶಶಿಯ ಮುಖ ನೋಡುತ್ತಲೇ ಅವರಿಗೆ ಎಲ್ಲಾ ಅರ್ಥವಾಯಿತು.

" ಕೆಲವರಿಗೆ ಬಾಲ್ಯದ ಘಟನೆಗಳನ್ನು ನೆನೆಪಿಸಿಕೊಳ್ಳುವುದೆಂದರೆ ತುಂಬಾ ಇಷ್ಟ. ಆದರೆ ಭೂತಕಾಲದ ನೆನಪು, ಭವಿಷ್ಯದ ಕನಸು ವರ್ತಮಾನದ ಸಂತೋಷವನ್ನು ಮರೆಸುವಂತಾಗಬಾರದು." ಎಂದು ಶಶಿಯನ್ನು ನೋಡುತ್ತಾ ರಶ್ಮಿಗೆ ಹೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ. ತನ್ನ ಕೈಯಲ್ಲಿದ್ದ ಗಿಫ್ಟ್ ನ್ನು ಬಿಚ್ಚಿ ನೋಡುವುದರಲ್ಲಿ ಮಗ್ನಳಾಗಿ ವರ್ತಮಾನದ ಸಂತೋಷ ಸವಿಯಲು ತೊಡಗಿದ್ದಳು.

ಶಶಿಯ ಸೂಕ್ಷ್ಮ ಮನಸ್ಸಿನ ಪರಿಚಯ ರಾವ್ ಗೆ ಚೆನ್ನಾಗಿಯೆ ಇತ್ತು. ಈಗ ಪತಿಯ ಮಾತುಗಳು ಶಶಿಯನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು. ತಾನು ಇಷ್ಟಪಡುತ್ತಿರುವುದು ಬಾಲ್ಯದ ಆ ಘಟನೆಯೇ ಅಥವಾ ಆ ನೆನಪೇ? ಎರಡೂ ಬೇರೆಯೇ? ಅವಳ ಮನಸ್ಸು ಗೊಂದಲದ ಗೂಡಾಯಿತು. ಕಣ್ಣೆದುರಿದ್ದ ರೇಷ್ಮೆ ಸೀರೆ ತನ್ನತ್ತ ಕೈಚಾಚು ಎಂದು ಕರೆದಂತಾಯಿತು. ಇಷ್ಟು ದಿನ ತನ್ನೆದುರಿದ್ದ ಸುಂದರ ವರ್ತಮಾನವನ್ನು ನಿರ್ಲಕ್ಷಿಸಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಚಿಂತಿಸುವಂತಾಯಿತು. ಸದಾ ಕಲ್ಪನಾಲೋಕದಲ್ಲಿಯೇ ಮುಳುಗಿರುವ ಯುವಕರಿಗೂ , ನೆನಪಿನ ಚಿಪ್ಪಿನಲ್ಲಿಯೇ ಮುಳುಗಿ ಕೊರುಗುತ್ತಿರುವ ತನ್ನಂತವರಿಗೂ ಏನು ವ್ಯತ್ಯಾಸ? ಇಬ್ಬರೂ ವರ್ತಮಾನದ ಗಳಿಗೆಯನ್ನು ಮರೆಯುತ್ತಿದ್ಡೇವೆ. ಇನ್ನು ಮುಂದೆ ತನ್ನ ನೆನಪುಗಳು ತನ್ನನ್ನಾಳಲು ಬಿಡಬಾರದೆಂದು ನಿರ್ಧರಿಸಿ ಸೀರೆಯನ್ನು ಕೈಗೆತ್ತಿಕೊಂಡು ಪತಿಯತ್ತ ದೃಷ್ಟಿ ಬೇರಿದಳು. ರಾವ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

-----------------