Saturday, February 21, 2009

ಭೀಷ್ಮರಿಗೆ ಓತಿ ಶಾಪ ಕೊಟ್ಟ ಪ್ರಸಂಗ

ಭೀಷ್ಮರಿಗೆ ಓತಿ ಶಾಪ ಕೊಟ್ಟ ಪ್ರಸಂಗ

ವಾರಣಾವತದ ಅರಗಿನರಮನೆಯಲ್ಲಿ ಸುಟ್ಟು ಭಸ್ಮವಾಗಿರುವರೆಂದು ಭಾವಿಸಿದ್ದ ಪಾಂಡವರು ಬದುಕಿ ಉಳಿದಿದ್ದಾರೆ ಎಂಬ ಸುದ್ದಿ ಕೇಳಿ ಹಸ್ತಿನಾಪುರದ ಜನತೆಗೆ ಸಂಸವಾಯಿತು.ಭೀಷ್ಮರು ಎಲ್ಲರಿಗಿಂತ ಹೆಚ್ಚು ಸಭ್ರಮ ಪಟ್ಟರು.ಪಾಂಡವರು ಬದುಕಿ ಉಳಿದಿರುವುದು ಮಾತ್ರವಲ್ಲ ತಮ್ಮ ಶೌರ್ಯ , ಪರಾಕ್ರಮದಿಂದ ಹಲವು ರಾಕ್ಷಸರನ್ನು ಕೊಂದು ಕೆಲವು ರಾಜಾಧಿರಾಜರನ್ನು ಗೆದ್ದು , ಪಾಂಚಾಲ ನಗರಿಯ ರಾಜ ದ್ರುಪದನ ರಾಜಕುಮಾರಿ ದ್ರೌಪದಿಯನ್ನುವಿವಾಹವಾಗಿ ಈಗ ಹಸ್ತಿನಾಪುರಕ್ಕೆ ಬರುತ್ತಿದ್ದಾರೆಂಬ ಸುದ್ದಿ ಅವರ ಸಂತಸವನ್ನು ಇಮ್ಮಡಿ ಮಾಡಿತ್ತು.ಈ ಸಂತೋಷದ ಸಮಯದಲ್ಲಿ ತಮ್ಮ ತಾಯಿ ಗಂಗಾಮಾತೆಯನ್ನು ನೋಡಬೇಕೆಂಬ ಆಸೆ ಭೀಷ್ಮರಿಗೆ ಹುಟ್ಟಿತು.ಸಂತಸದ , ದುಃಖದ - ಯಾವ ಸಮಾಚಾರವನ್ನೇ ಆಗಲಿ ಗಂಗಾಮಾತೆಯ ಬಳಿ ಹಂಚಿಕೊಳ್ಳುವುದು ಭೀಷ್ಮರಿಗೆ ಲಾಗಾಯ್ತಿನಿಂದ ಬಂದ ಅಭ್ಯಾಸ.ಮರುದಿನ ಕೋಳಿಕೂಗುವ ಹೊತ್ತಿಗೆ ಗಂಗಾನದಿಗೆ ಹೋಗಿ ಮಿಂದು , ಮಡಿಯುಟ್ಟು ಪೂಜೆ ಪುನಸ್ಕಾರ ಮಾಡಿ ಬರಬೇಕೆಂದು ನಿರ್ಧರಿಸಿ ಭೀಷ್ಮರು ಮಲಗಿದರು.

ಮುಂಗೋಳಿ ಕೂಗುವಾಗ , ಮೂಡು ಕೆಂಪೇರುವಾಗ ಕೌರವ, ಪಾಂಡವರಿಗೆಲ್ಲಾ ಹಿರಿಯರಾದ ಭೀಷ್ಮರು ಬಲಮಗ್ಗುಲಲ್ಲೆದ್ದು , ಗಂಗಾಮಾತೆಯನ್ನು ನೆನಪಿಸಿಕೊಳ್ಳುತ್ತಲೇ ಶಿವಸ್ಮರಣೆ ಮಾಡಿದರು. ನಂತರ ಕಾವಿವಸ್ತ್ರ ಧರಿಸಿ , ಒಂದು ಕೈಯಲ್ಲಿ ಕಮಂಡಲವನ್ನು , ಮತ್ತೊಂದು ಕೈಯಲ್ಲಿ ಆಸರೆಗಾಗಿ ದೊಣ್ಣೆಯನ್ನೂ ಹಿಡಿದುಕೊಂಡು ದಾಪುಗಾಲು ಹಾಕುತ್ತಾ ಗಂಗೆಯ ಬಳಿ ನಡೆದರು.ಅವರ ಮನಸ್ಸಿನ ತುಂಬಾ ಪಾಂಡವರ ಆಲೋಚನೆಗಳೇ ತುಂಬಿದ್ದವು. ಅವರ ಹುಟ್ಟು , ಅವರ ಬಾಲ್ಯ , ಅರಣ್ಯದಲ್ಲಿ ಬದುಕಿದ ರೀತಿ , ಪಾಂಡುವಿನ ಸಾವು, ನಂತರ ತಾಯಿ ಕುಂತಿಯೊಡನೆ ಹಸ್ತಿನಾವತಿಗೆ ಬಂದದ್ದು, ಕೌರವ ಪಾಂಡವರಲ್ಲಿ ಸದಾ ತುಂಬಿತುಳುಕುತ್ತಿದ್ದ ಅಸಮಾಧಾನ ಕಡೆಗೆ ಅವರನ್ನು ದೃತರಾಷ್ಟ್ರನು ವಾರಣಾವತಕ್ಕೆ ಕಳಿಸಿದ್ದು, ಅಲ್ಲಿ ಅರಗಿನ ಮನೆಯಲ್ಲಿ ಅವರು ಸತ್ತುಹೋದರೆಂಬ ಸುದ್ದಿ , ನಂತರ ಅವರು ಕಾಡಿನಲ್ಲಿ ಪಟ್ಟಿರಬಹುದಾದ ಕಷ್ಟಗಳ ಸರಮಾಲೆ...ಹೀಗೆ ಅವರ ಮನದ ತುಂಬಾ ಪಾಂಡವರೇ ಆವರಿಸಿದ್ದರು. ಆಗ ಅವರ ದಾರಿಗೆ ಅಡ್ಡವಾಗಿ ಓತಿಕ್ಯಾತವೊಂದು ಬರುತ್ತಿದ್ದುದು ಭೀಷ್ಮರ ಗಮನಕ್ಕೆ ಬರಲಿಲ್ಲ. ಅಕಸ್ಮಾತ್ತಾಗಿ ಅವರು ದೊಣ್ಣೆ ಊರುವುದಕ್ಕೂ ಓತಿ ಅದರ ತುದಿಗೆ ಸಿಕ್ಕಿಕೊಳ್ಳುವುದಕ್ಕೂ ಸಮನಾಯಿತು. ಓತಿ ದೊಣ್ಣೆಯ ತುದಿಯಿಂದ ಬಿಡಿಸಿಕೊಳ್ಳಲು ವಿಲವಿಲ ಒದ್ದಾಡಿತು. ಆಗ ಅದರ ಇರುವಿಕೆ ಭೀಷ್ಮರ ಗಮನಕ್ಕೆ ಬಂದು, ತನ್ನ ಕೆಲಸಕ್ಕೆ ಅಡ್ಡವಾಗಿ ಬಂದ ಓತಿಯ ಬಗ್ಗೆ ಅವರಿಗೆ ಅಪಾರ ರೋಷ ಉಕ್ಕಿ ಬಂದಿತು.

" ಬೆಳಿಗ್ಗೆಯೇ ಇದೆಂತಹ ಅಪಶಕುನ " ಎಂದು ತಮ್ಮಲ್ಲಿಯೇ ಸಿಡಿಮಿಡಿಗೊಂಡು ದೊಣ್ಣೆಯ ತುದಿಯಿಂದ ಆ ಓತಿಯನ್ನು ಎತ್ತಿ ದೂರಕ್ಕೆ ಚಿಮ್ಮಿದರು. ರೊಯ್ಯನೆ ಹಾರಿದ ಓತಿ ಅನತಿ ದೂರದಲ್ಲಿದ್ದ ಮುಳ್ಳಿನ ರಾಶಿಯ ಮೇಲೆ ಬಿದ್ದಿತು. ಮೊದಲೇ ನೋವು ತಿನ್ನುತ್ತಿದ್ದ ಓತಿ ಮುಳ್ಳಿನ ತಿವಿತದಿಂದ ವಿಲವಿಲನೆ ಒದ್ದಾಡಿತು.

ದಾರಿಯ ಕಂಟಕವನ್ನು ತೊಲಗಿಸಿದ ಭೀಷ್ಮರು ತಮ್ಮ ಪಾಡಿಗೆ ತಾವು ನಡೆಯಲು ಪ್ರಾರಂಭಿಸಿದಾಗ

" ನಿಲ್ರಪ್ಪಾ ಭೀಷ್ಮರೆ " ಎಂದು ಯಾರೋ ಕೂಗಿದಂತೆ ಕೇಳಿಸಿತು.

ತಿರುಗಿ ಸುತ್ತಲೂ ನೋಡಿದರೆ ಮುಳ್ಳಿನ ರಾಶಿಯ ಮೇಲೆ ಬಿದ್ದಿದ್ದ ಓತಿಕ್ಯಾತ ,

" ನಿಲ್ರಪ್ಪಾ ಭೀಷ್ಮರೆ , ನೀವು ದೊಡ್ಡ ಮನುಷ್ಯರು. ರೀ ಸ್ವಾಮಿ ಹಂಗೇ ಹೋಯ್ತಾ ಇದ್ದೀರಲ್ಲಾ , ನಿಲ್ಲಿ ಸ್ವಾಮಿ ನಿಲ್ಲಿ. ಮಾಡೋದು ಮಾಡ್ಬಿಟ್ಟು ಕತ್ ಬಗ್ಗಿಸಿಕೊಂಡು ಹೋಗ್ತಾ ಇದ್ದೀರಲ್ಲಾ ? ಇದು ನ್ಯಾಯವೇನ್ರಪ್ಪಾ " ಎಂದು ಕೇಳಿತು.

" ನಂದೇನು ತಪ್ಪು ಇದರಲ್ಲಿ ? ನೀನೇ ತಾನೆ ನನ್ನ ದೊಣ್ಣೆಗೆ ಅಡ್ಡ ಬಂದಿದ್ದು " ಎಂದರು ಭೀಷ್ಮರು.

" ಹೌದಪ್ಪಾ ನಿಮ್ ದೊಣ್ಣೆಗೆ ಅಡ್ಡ ಬಂದಿದ್ದು ನನ್ನದೇ ತಪ್ಪು. ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಆದರೆ ನಾನು ವಿಲವಿಲ ಒದ್ದಾಡ್ತಾ ಇದ್ದಾಗ ಸುಮ್ಮನಿರದೆ ನಿಮ್ಮ ದೊಣ್ಣೆ ತುದಿಯಿಂದ ನನ್ನನ್ನು ದೂರಕ್ಕೆ ಚಿಮ್ಮಿದ್ದು ನಿಮ್ಮ ತಪ್ಪಲ್ವಾ ?" ಎಂದಾಗ ಭೀಷ್ಮರು ಉತ್ತರಿಸದೆ ಸುಮ್ಮನಿದ್ದರು. ಆಗ ಓತಿಯು ತನ್ನ ಮಾತನ್ನು ಮುಂದುವರಿಸಿ,

" ಈ ರೊಟ್ಟಿಮುಳ್ಳಿನ ರಾಶಿ ಮೇಲೆ ಬಿದ್ದು ನನ್ನ ದೇಹವೆಲ್ಲಾ ರಣರಂಪವಾಗಿದೆ. ಇದು ನಿಮ್ಮ ತಪ್ಪಲ್ವಾ ? ದೊಣ್ಣೆ ಊರಿದ್ದು ನಿಮ್ಮ ತಪ್ಪಲ್ಲ. ಆದರೆ ತಿಳಿದೂ ತಿಳಿದೂ ಎತ್ತಿ ಬಿಸಾಕಿದ್ದು ನಿಮ್ಮ ತಪ್ಪಲ್ಲವೇ ?
ಸಾಯುವ ಕಾಲದಲ್ಲಿ ನಾನು ಹೇಗೆ ಮುಳ್ಳಿನ ಮೇಲೆ ಒರಗಿ ಒದ್ದಾಡ್ತಾ ಇದ್ದೀನೋ ಹಾಗೆ ನೀವೂ ಸಹ ಕಡೆಗಾಲದಲ್ಲಿ ಮುಳ್ಳಿನ ಮೇಲೆ ಒರಗಿ ಸಾಯ್ರಪ್ಪಾ " ಎಂದು ಶಾಪ ಕೊಟ್ಟಿತು.

" ಅಯ್ಯೋ ದೇವ್ರೇ ! ಈ ಓತಿ ಎಂತಹ ಶಾಪ ಕೊಟ್ಬಿಡ್ತಲ್ಲಾ ," ಎಂದು ಬೆದರಿದ ಭೀಷ್ಮರು ಓತಿಯ ಬಳಿ ಓಡಿ ಹೋಗಿ ,

" ನಾನು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪು ನನಗರಿವಾಗಿದೆ. ದಯವಿಟ್ಟು ನನ್ನನ್ನು ಕ್ಷ್ಮಮಿಸಿ ಬಿಡಪ್ಪ " ಎಂದರು.

ಆದರೆ ಓತಿ ಅವರತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕಾಲ ಮಿಂಚಿತ್ತು.ಬಗ್ಗಿ ನೋಡಿದರೆ ಓತಿಯ ಪ್ರಾಣ ಆಗಲೇ ಹಾರಿಹೋಗಿತ್ತು.!

ದುಃಖಿತರಾದ ಭೀಷ್ಮರು " ಓತಿಯ ಮಾತುಗಳು ಎಷ್ಟು ಅರ್ಥಪೂರ್ಣ ! ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಸಿಗಬಹುದು. ಆದರೆ ತಿಳಿದೂ ತಿಳಿದೂ ಮಾಡುವ ತಪ್ಪು ಘೋರವಾದದ್ದು. ಆದ್ದರಿಂದಲೇ ಅದಕ್ಕೆ ಕ್ಷಮೆ ಇರುವುದಿಲ್ಲ "

ಎಂದು ಚಿಂತಿಸುತ್ತಾ ಗಂಗಾನದಿಯತ್ತ ನಡೆದರು.

ಮುಂದೆ ಮಹಾಭಾರತ ಯುದ್ಧ ಸಂದರ್ಭದಲ್ಲಿ ಭೀಷ್ಮರು ಅರ್ಜುನ ರಚಿಸಿದ ಶರಶಯ್ಯೆಯ ಮೇಲೆ ಮಲಗಿ ಅಪಾರ ನೋವನ್ನನುಭವಿಸುತ್ತಾ ಕೊನೆಯುಸುರೆಳೆದರು.

ಆಧಾರ : ಜನಪದ ಮಹಾಭಾರತ

[ ಈ ಕತೆ 8 ನೆ ಡಿಸೆಂಬರ್ 2007 ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. }

27 comments:

  1. ಕಥೆ ಮತ್ತು ನೀತಿ ಎರಡೂ ಚೆನ್ನಾಗಿದೆ.ನಮ್ಮ ಜನಪದರ ಕಥೆಗಳ ಸಂಗ್ರಹ ಅದ್ಭುತ.
    ಮೇಡಂ ಹೇಳಿದ ನಿಮಗೆ ಧನ್ಯವಾದಗಳು.

    ReplyDelete
  2. ಚಂದ್ರಕಾಂತರವರೆ..

    ಮಹಾಭಾರತದದಲ್ಲಿ ಇಷ್ಟವಾಗುವ ಪಾತ್ರಗಳಲ್ಲಿ..
    ಭೀಷ್ಮನ ಪಾತ್ರವೂ ಒಂದು....

    ತಂದೆಯ ಆಸೆ ಈಡೇರಿಸಲು ಮಾಡಿದ ಪ್ರತಿಜ್ಞೆಗಾಗಿ..
    ಹಸ್ತಿನಾವತಿಪುರದ ಸಿಂಹಾಸನಕ್ಕಾಗಿ..
    ನಿಸ್ವಾರ್ಥ ಬದುಕಿನಲ್ಲಿ...

    ತನ್ನ ಜೀವನದ ಸಾರ್ಥಕತೆಯನ್ನು ಕಂಡ ..

    ಆ ಪಾತ್ರವೆಂದರೆ..
    ನನಗೆ ಬಹಳ ಇಷ್ಟ..

    ಭೀಷ್ಮನ ಒಳ ತುಮಲದ.. ಆಂತರ್ಯವನ್ನು..
    ಬಹಳ ಸಹಜವಾಗಿ..ಬಣ್ಣಿಸಿದ್ದೀರಿ...

    ಓತಿಯೆಂಬುದು ಸಣ್ಣ ಜೀವಿ..

    ಸಕಲವಿದ್ಯಾ ಪಾರಂಗತಾರಾದ ಭೀಷ್ಮರಿಗೆ..
    ಲೋಕನ್ಯಾಯನೀತಿಯ..

    ಶಾಪ ಕೊಡುವ ಸೂಕ್ಷ್ಮ..

    ಬಹಳ ಇಷ್ಟವಾಯಿತು...

    ನೀವು ಇನ್ನಷ್ಟು ಪೌರಾಣಿಕ ಕಥನ ಬರೆಯಿರಿ..

    ಚಂದವಾದ ಬರಹಕ್ಕೆ ..
    ಅಭಿನಂದನೆಗಳು..

    ReplyDelete
  3. ಚಂದ್ರಕಾಂತ ಮೇಡಮ್,

    ಈ ಕತೆ ಮತ್ತು ನೀತಿ ತುಂಬಾ ಚೆನ್ನಾಗಿದೆ...ಇಂದಿಗೂ ಇಂಥ ಮಾತುಗಳು ಪ್ರಸ್ತುತ.

    ಮಹಾಭಾರತದಲ್ಲಿ ಬೀಷ್ಮ, ದ್ರೋಣ, ಕರ್ಣ ಪಾತ್ರಗಳು ನನಗಿಷ್ಟ. ಅವರು ಅರಿಯದೇ ತಪ್ಪು ಮಾಡಿ ಮುಂದೆ ಅನೇಕ ಶಾಪಗಳಿಗೆ ಒಳಗಾಗುವುದು ಎಲ್ಲರಿಗೂ ತಿಳಿದಿದೆ...ಬೀಷ್ಮಾಚಾರ್ಯರು ಮಹಾನ್ ಸಾಧಕರು. ಅವರ ಬಗ್ಗೆ ಇನ್ನಷ್ಟು ಬರೆಯಿರಿ....

    ReplyDelete
  4. ಚಂದ್ರಕಾಂತಾ,
    ಕತೆ ಓದುತ್ತಿದ್ದಂತೆ ಮೈ ಜುಮ್ ಎಂದಿತು. ಹಾಗೆಯೇ ನಿಮ್ಮ blogನ ಘೋಷವಾಕ್ಯಗಳು ಮತ್ತಷ್ತು ಅರ್ಥಪೂರ್ಣವಾಗಿ ಕಂಡವು.

    "ಈ ಭೂಮಿ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ. ಇತರ ಅಸಂಖ್ಯ ಜೀವಿಗಳಂತೆ ಮಾನವ ಕೂಡ ಒಂದು ಜೀವಿ. ಜೀವಿಗಳ ಈ ಸಂಕೀರ್ಣ ಜಾಲವನ್ನು ಮಾನವ ನೇಯ್ದದ್ದಲ್ಲ. ಆತ ಈ ಜಾಲದ ಒಂದು ಎಳೆ ಅಷ್ಟೆ!ಈ ಭೂಮಿಗೆ ದುರ್ಗತಿ ಬಂತೆಂದರೆ ಮಾನವನಿಗೂ ಅದೇ ಗತಿ ಬಂತೆಂದು ಅರ್ಥ."

    ಭೀಷ್ಮರಿಗೇ ಪಾಠ ಕಲಿಸಿದ ಆ ಓತಿಗೆ ನಮನಗಳು.

    ReplyDelete
  5. ಮಹಾಭಾರತದ ಕಥೆಯಲ್ಲಿನ ನೀತಿ ಸಾರ್ವಕಾಲಿಕ. ಅದರ ಒ೦ದು ಎಳೆಯನ್ನು ನವೀನ ನಿರೂಪಣೆಯೊ೦ದಿಗೆ ಹೆಣೆದಿದ್ದೀರಿ. ಚೆನ್ನಾಗಿದೆ.

    ReplyDelete
  6. @ ಮಲ್ಲಿಕಾರ್ಜುನ ಅವರೆ

    ಈ ದಿನ ನಿಮ್ಮ ಬ್ಲಾಗನ್ನು ಕೆಂಡಸಂಪಿಗೆಯಲ್ಲಿ ಪರಿಚಯಿಸಿದ್ದಾರೆ. ಅದು ನಿಮ್ಮದೆಂದು ತಿಳಿಯದೆ ಬ್ಲಾಗ್ ತೆಗೆದು ನೋಡಿದರೆ ಅನೆಕ ಜನ ಸಾಹಿತಿಗಳು, ಕವಿಗಳು ಮುಂತಾದವರ ಹಸ್ತಾಕ್ಷರಗಳೊಂದಿಗಿನ ಚಿತ್ರಗಳನ್ನು ನೋಡಿ ಖುಷಿಯಾಯಿತು.ಅದಕ್ಕಾಗಿ ಧನ್ಯವಾದಗಳು.

    ಈ ಕಥೆ ನಿಮಗೆ ಮೆಚುಗೆಯಾಗಿದ್ದಕ್ಕೆ ಧನ್ಯವಾದಗಳು.

    ReplyDelete
  7. @ ಪ್ರಕಾಶ್ ಅವರೆ

    ಭೀಷ್ಮರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವಿರಿ.ನಿಜ ಓತಿಯಂತಹ ಸಣ್ಣ ಜೀವಿಯ ಶಾಪಕ್ಕೆ ಭೀಷ್ಮರು ಒಳಗಾಗಬೇಕಾಯಿತು. ಕಾರಣ , ಆ ಸಣ್ಣ ಜೀವಿಯ ಬಾಯಲ್ಲಿ ಬಂದ ಸತ್ಯ.

    ನನಗೂ ಪೌರಾಣಿಕ ಕಥೆಗಳೆಂದರೆ ಬಹಳ ಇಷ್ಟ.

    ಧನ್ಯವಾದಗಳು.

    ReplyDelete
  8. @ ಶಿವು ಅವರೆ

    ನೀವು ಹೇಳಿದಂತೆ ಮಹಾಭಾರತದ ಎಲ್ಲಾ ಪಾತ್ರಗಳೂ ತಮ್ಮದೇ ವೈಶಿಷ್ಟ್ಯ ಹೊಂದಿವೆ.

    ಅದರಲ್ಲಿಯೂ ಭೀಷ್ಮರ ಪಾತ್ರದ ಬಗ್ಗೆ ಹೇಳಬೇಕಾದ್ದು ಬೇಕಾದಷ್ಟಿದೆ. ಬರೆಯಲು ಪ್ರಯತ್ನಿಸುವೆ.


    ಧನ್ಯವಾದಗಳು.

    ReplyDelete
  9. @ ಸುನಾಥ್ ಸರ್

    ನನಗೂ ಈ ಕತೆಯನ್ನು ಮೊದಲ ಬಾರಿ ಓದಿದಾಗ ಮೈ ಝುಮ್ಮೆಂದಿತು. ಕಾರಣ ಭೀಷ್ಮರಂತವರಿಗೇ ಶಾಪ ಕೊಟ್ಟ ಓತಿ Great ಅನ್ನಿಸಿತ್ತು. ಆದರೆ ಎಂತಹ ಕಿರಿಯ ಜೀವಿಗೂ ನ್ಯಾಯವೊಂದು ತನ್ನ ಕಡೆಗಿದ್ದರೆ ವಿರಾಟ್ ಸ್ವರೂಪದ ಶಕ್ತಿ ಬರುತ್ತದೆ ಎಂದೂ ಅರ್ಥವಾಯಿತು.

    ನನ್ನ ಬ್ಲಾಗಿನ ಘೋಷ ವಾಕ್ಯ ಇಷ್ಟವಾಗಿದ್ದಕ್ಕೆ ನಿಮ್ಮ ಗಮನ ಸೆಳೆದದ್ದಕ್ಕೆ ಧನ್ಯವಾದಗಳು. " ಇರುವುದೊಂದೇ ಭೂಮಿ " ಗ್ರಂಥವನ್ನು ನಾಗೇಶ್ ಹೆಗಡೆ ಬರೆದಿದ್ದಾರೆ. ಇಡೀ ಗ್ರಂಥದಲ್ಲಿ ಈ ಭೂಮಿಯನ್ನು ಮನುಷ್ಯ ಹೇಗೆ ಕಾಪಾಡಿಕೊಳ್ಳಬೇಕು, ಈಗಾಗಲೇ ಹೇಗೆ ಹಾಳುಗೆಡವಿದ್ದಾನೆ ಮುಂತಾದವುಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ.

    ReplyDelete
  10. @ ಪರಾಂಜಪೆಯವರೆ

    ರಾಮಾಯಣ, ಮಹಾಭಾರತಗಳು ಏಕೆ ಮಹಾಕಾವ್ಯಗಳೆಂಬ ಹೊಗಳಿಕೆಗೆ ಪಾತ್ರವಾಗಿವೆ ಎಂಬ ಅರಿವಾಗಬೇಕಾದರೆ ಆ ಗ್ರಮ್ಥಗಳನ್ನು ಓದಬೇಕು. ಅವುಗಳಲ್ಲಿ ಈ ಕಾಲಕ್ಕೂ ಪ್ರಸ್ತುತವಾಗುವಂತಹ ಅನೇಕ ಅಂಶಗಳಿವೆ. ಮನುಷ್ಯನಲ್ಲಿರುವ ಸಂಕುಚಿತ ಗುಣಗಳು, ಹೀನ ಸ್ವಭಾವಗಳು ಅದರಿಂದ ಅವನು ಅವಸಾನ ಹೊಂದುವ ರೀತಿ , ಇವೆಲ್ಲವೂ ನಮಗೆ ಅನೇಕ ನಿತಿ ಪಾಠಗಳನ್ನು ರಸಭರಿತವಾಗಿ ಹೇಳುತ್ತವೆ.

    ಈ ಕಥೆಯನ್ನು ಬರೆಯಲು ಕಾರಣ - ಜನಪದ ಮಹಾಭಾರತದ ಈ ಭಾಗ ಕಾವ್ಯರೂಪದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದು.- ಅದರಿಂದ ಆಕರ್ಷಿತಳಾಗಿ ಅದನ್ನು ಕೆಲವು ವಿಚಾರಗಳನ್ನು ಸೇರಿಸಿ ಕಥೆಯ ರೂಪದಲ್ಲಿ ಬರೆದಿರುವೆ.

    ಧನ್ಯವಾದಗಳು

    ReplyDelete
  11. ಪರಾಂಜಪೆಯವರೆ

    ಗ್ರಂಥಗಳು ಎಂದು ಓದಿಕೊಳ್ಳಿ. ತಪ್ಪಾಗಿದೆ

    ReplyDelete
  12. ಚಂದ್ರಕಾಂತ ಅವರೆ,

    "ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಸಿಗಬಹುದು. ಆದರೆ ತಿಳಿದೂ ತಿಳಿದೂ ಮಾಡುವ ತಪ್ಪು ಘೋರವಾದದ್ದು. ಆದ್ದರಿಂದಲೇ ಅದಕ್ಕೆ ಕ್ಷಮೆ ಇರುವುದಿಲ್ಲ " -ಏಷ್ಟೊಂದು ಅರ್ಥಪೂರ್ಣವಾಗಿದೆ ಈ ವಾಕ್ಯ! ನಿಜಕ್ಕೂ ಸಾರ್ವಕಾಲಿಕೆ ಮಾನನೀಯವಾಗಿಹುದು.

    ಹಾಗೆಯೇ ನೀವು ಕಾಕಾರಿಗೆ ಉತ್ತರಿಸುತ್ತಾ ಹೇಳಿದ "ಎಂತಹ ಕಿರಿಯ ಜೀವಿಗೂ ನ್ಯಾಯವೊಂದು ತನ್ನ ಕಡೆಗಿದ್ದರೆ ವಿರಾಟ್ ಸ್ವರೂಪದ ಶಕ್ತಿ ಬರುತ್ತದೆ"- ಈ ಮಾತು ಕೂಡಾ ತುಂಬಾ ಇಷ್ಟವಾಯಿತು. ನಿಮ್ಮ ಕಥಾ ನಿರೂಪಣಾ ಶೈಲಿ, ವಸ್ತು, ಸಂದೇಶ ಎಲ್ಲಾ ತುಂಬಾ ಚೆನ್ನಾಗಿವೆ. ಹೀಗೇ ಬರೆಯುತ್ತಿರಿ. ಓದಿ ಮನಸ್ಸು ತುಂಬಾ ಹಗುರವಾಗುತ್ತದೆ :)

    ReplyDelete
  13. >>ಆಧಾರ : ಜನಪದ ಮಹಾಭಾರತ
    ಜನಪದ ಮಹಾಭಾರತದ ಬಗ್ಗೆ ಸ್ವಲ್ಪ ಹೇಳ್ತೀರ?
    --
    ಪಾಲ

    ReplyDelete
  14. madam, ee kathe tumbaa chennaagide. oLLe neetipaaTa ide...ellaruu tappu maaduttaare, aadare ella tappigu kshame irodilla annodu nija.

    ReplyDelete
  15. @ ಪಾಲಚಂದ್ರ ಅವರೆ

    ನಿಮ್ಮ ಕುತೂಹಲದ ಪ್ರಶ್ನೆ ನನಗೆ ಇಷ್ಟವಾಯಿತು.

    "ಜನಪದ ಮಹಾಕಾವ್ಯ" ಎನ್ನುವುದು ಜಾನಪದದಲ್ಲಿ ತೀರ ಆಧುನಿಕ ಪರಿಕಲ್ಪನೆ.ಪ್ರಪಂಚದಾದ್ಯಂತ ಅನೆಕ ಜನಪದ ಮಹಾಕಾವ್ಯಗಳಿವೆ.ಕನ್ನಡದಲ್ಲಿ ಮಲೆಯ ಮಹದೇಶ್ವರ ಕಾವ್ಯ, ಮಂಟೇಸ್ವಾಮಿ ಕಾವ್ಯ, ಜುಂಜಪ್ಪನ ಕಾವ್ಯ, ಮೈಲಾರಲಿಂಗನ ಕಾವ್ಯ ಮುಂತಾದ ಮಹಾಕಾವ್ಯಗಳಿವೆ. ಅವುಗಳ ಸಾಲಿಗೆ ಸೇರುವಂತದ್ದು ಜನಪದ ರಾಮಾಯಣ ಮತ್ತು ಜನಪದ ಮಹಾಭಾರತ ಕಾವ್ಯಗಳು.ಶಿಷ್ಟ ರಾಮಾಯಣ ( ವಾಲ್ಮೀಕಿ) ಮತ್ತು ಶಿಷ್ಟ ಭಾರತ( ವ್ಯಾಸ)ಗಳಿಗೆ ಸಾಮಾನ್ಯ ಜನಪದರ ಹಾಡುಗ್ಳೇ ಮೂಲ ಎಂಬ ವಾದವೊಂದಿದೆ.ಡಾಕ್ಟರ್ ಪಿ.ಕೆ. ರಾಜಶೇಖರ ಅವರು ಇದುವರೆಗೂ ಅಪ್ರಕಟಿತವಾದ ಬೆಟ್ಟದ ಬೀಡು ಸಿದ್ದಶೆಟ್ಟಿಯವರು ಹಾಡಿರುವ ಸುಮಾರು ಒಂದು ಸಾವಿರ ಪುಟಗಳಷ್ಟು ಧೀರ್ಖವಾದ ಕಾವ್ಯವನ್ನು " ಜನಪದ ಮಹಾಭಾರತ " ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ.ಅದರಿಂದ ಆಯ್ದ ಕಾವ್ಯಭಾಗದ ಗದ್ಯರೂಪವೇ ನಾನು ಬರೆದ ಬರಹ.

    ಇನ್ನೇನಾದರೂ ಅನುಮಾನವಿದ್ದರೆ ಪರಿಹರಿಸಲು ಪ್ರಯತ್ನಿಸುವೆ. ನಾನು ಮೇಲೆ ತಿಳಿಸಿದ ಗ್ರಂಥ ಸಿಗುತ್ತದೆ. ಅದರಲ್ಲಿ ಅನೇಕ ಪ್ರಸಂಗಗಳಿವೆ

    ಜನಪದ ರಾಮಾಯಣವೂ ತುಂಬಾ ಕುತೂಹಲಕರವಾದ ಕಾವ್ಯ

    ReplyDelete
  16. ಮೇಡಂ,
    >>ಮುಂಗೋಳಿ ಕೂಗುವಾಗ , ಮೂಡು ಕೆಂಪೇರುವಾಗ
    ಮುಂಗೋಳಿ ಕೂಗ್ಯಾವೋ ಮೂಡು ಕೆಂಪೇರ್ಯಾವೋ ಸ್ವಾಮೀ ನನ್ನಯ್ಯ ರಥವೇರಿ, ನಿಮ್ಮೀ ಪದ ಪ್ರಯೋಗ ಈ ಹಾಡನ್ನ ನೆನಪಿಸಿತು

    ನೀವು ಆರಿಸಿಕೊಂಡ ಕಾವ್ಯ ಭಾಗದ ದೃಷ್ಟಿಕೋನ ತುಂಬಾ ವಿಶಿಷ್ಟವಾಗಿದೆ . ಕಾವ್ಯ ರೂಪದ ಗದ್ಯಾನುವಾದ ಚೆನ್ನಾಗಿದೆ, ಜನಪದ ಮಹಾಕಾವ್ಯದ ಪರಿಚಯಕ್ಕೆ ವಂದನೆಗಳು. ಖಂಡಿತ ಕೊಂಡು ಓದುತ್ತೇನೆ.

    ನಿಮಗೆ ಹಲ್ಲಿನ್ನ ನೋಡಿದ್ರೆ ಹೆದ್ರಿಕೆ ಆಗುತ್ತಾ? ಇಲ್ಲಾಂದ್ರೆ ಓತಿ ನಗ್ತಾ ಇರೋ ಚಿತ್ರಾನ ನನ್ನ ಬ್ಲಾಗಲ್ಲಿ ಹಾಕಿದೀನಿ, ಬಿಡುವಿದ್ದಾಗ ನೋಡಿ:
    http://palachandra.blogspot.com/2009/01/blog-post_10.html
    --
    ಪಾಲ

    ReplyDelete
  17. @ ತೇಜಸ್ವಿನಿ

    ಪ್ರೀತಿ ತುಂಬಿದ ಅಭಿಮಾನಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.
    ನಮ್ಮ ಬದುಕನ್ನು ರೂಪಿಸುವ ಇಂತಹ ಸಣ್ಣ ಸಣ್ಣ ಸತ್ಯಗಳು, ಮೌಲ್ಯಗಳು ನಮ್ಮ ಹೆಮ್ಮೆಯ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತಗಳಲ್ಲಿ ಹೇರಳವಾಗಿ ಸಿಗುತ್ತವೆ. ಅದನ್ನು ಹೆಕ್ಕಿ ಹುಡುಕ ಬೇಕಷ್ಟೆ.( ತೀನಂಶ್ರೀಯವರು ಹೇಳಿದಂತೆ
    " ಬೆಳೆಯೇನೋ ಬೇಕಾದಷ್ಟಿದೆ ಕೊಯ್ಯುವವರಿಲ್ಲ ")

    ಈ ಬರಹಗಳಿಂದ ನನಗೂ ಬಹಳ ಲಾಭವಾಗಿದೆ. ಚೆನ್ನಾಗಿ ಪ್ರತಿಕ್ರಿಯಿಸುವ ಬ್ಲಾಗ್ ಸಹೃದಯರಿಂದ ಬರೆಯಲು ಮತ್ತಷ್ಟು ಉತ್ಸಾಹ ಮೂಡುತ್ತಿದೆ
    ಧನ್ಯವಾದಗಳು

    ReplyDelete
  18. @ ಲಕ್ಷ್ಮಿ
    ಎಲ್ಲಿರುವೆ?
    ನಿನ್ನ ಮಾತು ನಿಜ. ಕತೆಯ ನೀತಿ ಚೆನ್ನಾಗಿ ತಿಳಿದುಕೊಂಡಿರುವೆ:)

    ReplyDelete
  19. @ ಪಾಲಚಂದ್ರ ಅವರೆ
    ನೀವು ತಿಳಿದಿರುವಂತೆ " ಮುಂಗೋಳಿ ಕೂಗ್ವಾಗ ಮೂಡು ..." ನನ್ನ ಸಾಲುಗಳಲ್ಲ. ಅದು ಆ ಕಾವ್ಯದಲ್ಲಿ ಪ್ರಯೋಗವಾಗಿತುವ ಪದಗಳೇ!
    ನಿಮ್ಮ ಓತಿಯ ಚಿತ್ರಗಳು ಬಹಳ ಚೆನ್ನಾಗಿವೆ

    ReplyDelete
  20. hello madam,
    ಈ ಕಥೆ ಚೆನ್ನಾಗಿದೆ, ಇಂತಹ ಘಟನೆ ಮಹಾಭಾರತದಲ್ಲಿರುವುದು ನನಗೆ ಗೊತ್ತೇ ಇರಲಿಲ್ಲ! "ಸಿಟ್ಟು" ಭೀಶ್ಮ ರಂತಹವರ ಕೈಲಿ ಈ ಕೆಲಸ ಮಾಡಿಸಿದರೆ , ಇನ್ನು ನಮ್ಮಂತ ಸಾಮಾನ್ಯರ ಗತಿಯೇನು?!!
    "ಎಂತಹ ಕಿರಿಯ ಜೀವಿಗೂ ನ್ಯಾಯವೊಂದು ತನ್ನ ಕಡೆಗಿದ್ದರೆ ವಿರಾಟ್ ಸ್ವರೂಪದ ಶಕ್ತಿ ಬರುತ್ತದೆ" ಈ ವಾಕ್ಯ ನನಗೂ ತುಂಬ ಇಷ್ಟವಾಯಿತು.very powerful!

    on a lighter note - ಕಾಲೇಜಲ್ಲಿ ಅರೆಬರೆ ಜೀವ ಇರುವ ಜಿರಳೆಗಳನ್ನು disection boardಗೆ ಗುಂಡು ಪಿನ್ನು ಹಾಕಿ ಚುಚ್ಚಿ, ಬ್ಲೇಡಲ್ಲಿ ಕುಯ್ದು, ರಿಪೋರ್ಟ್ ಬರ್ದಿರೋದಕ್ಕೆ ಆ ಜಿರಳೆಗಳು ನನಗೆ ಏನು ಶಾಪ ಕೊಟ್ಟಿದ್ಯೋ ಏನೋ ಅಂತ ಭಯ ಆಗ್ತಿದೆ!!!!

    ಮತ್ತೆ ನೀವು ನನಗೆ ಬರೆಯುತ್ತೀರೆಂದು ಹೇಳಿದ್ದ "ಲಘು ಬರಹ" ಇನ್ನೂ ಬರೆದಿಲ್ಲ...ಅಥವ..ಪ್ರವಾಸ ಕಥನ ಲಘುವಾಗೆ ಇತ್ತಲ್ಲ ಅಂತೀರೇನೊ :)!

    ReplyDelete
  21. @ ಗೀತಾ

    ನಿನಗೆ ಇ ಕತೆ ಇಷ್ಟವಾಗಲಿಲ್ಲವೇನೋ ಎಂದುಕೊಂಡಿದ್ದೆ:))
    ಇದು ವ್ಯಾಸಭಾರತದಲ್ಲಿಲ್ಲ. ಇಂತಹ ಅನೇಕ ಕತೆಗಳು ಬೇರೆ ಬೇರೆ ಭಾರತಗಳಲ್ಲ್ಲಿವೆ.
    ಸಿಟ್ಟು ಎಲ್ಲರಲ್ಲೂ ಇರುವ ಮೂಲಭೂತ ಗುಣ. ಸಾಮಾನ್ಯವಾಗಿ ಅಧಿಕಾರ ಹಣ ಇರುವವರಲ್ಲಿ ಸಿಟ್ಟು ಹೆಚ್ಚು ಇರುತ್ತದೆ. ಯಾರು ಸಿಟ್ಟನ್ನು ನಿಗ್ರಹಿಸಬಲ್ಲರೋ ಅವರೇ ಶ್ರೇಷ್ಟರು
    ಇನ್ನು ಕಾಲೇಜಿನಲ್ಲಿ disect ಮಾಡುವ ವಿಚಾರ. ಬಹುಶಃ ಆ ಎಲ್ಲಾ ಪ್ರಾಣಿಗಳೂ ಶಾಪ ಕೊಟ್ಟಿದ್ದರಿಂದಲೇ ಇಂದಿನ ಮನುಷ್ಯ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಅನಿಸುತ್ತದೆ:)
    ಲಘು ಬರಹ ಸಿದ್ದವಾಗುತ್ತಿದೆ. ಆದರೆ ಬೇರೆಯವರಿಗೆ ಅದು ’ ಭಾರ" ಅನಿಸಿದರೆ? ಎಂಬ ಚಿಂತೆಯಲ್ಲಿದ್ದೇನೆ. ಪ್ರವಾಸಕಥನ ಲಘುವಾಗೇ ಇತ್ತು ಎಂದು ನೀನು ಒಪ್ಪಿಕೊಂಡಿರುವುದರಿಂದ ಸರಿಯಾಯ್ತಲ್ಲಾ!

    ReplyDelete
  22. ಗಿತಾ

    ಈ ಕತೆ ಎಂದು ಓದಿಕೋ

    ReplyDelete
  23. ಚಂದ್ರಕಾಂತ ಮೇಡಮ್,

    ಸುನಾಥ್ ಸರ್ ಬ್ಲಾಗಿನ ಚರ್ಚು, ಪರ್ಚು, ಕಲಿಯುವಿಕೆಯಲ್ಲಿ , ನಿಮ್ಮ ಪದ ಭಂಡಾರ ಪರ್ಸಿನಿಂದ "ಪರ್ಚು" ಪದದ ಅರ್ಥ ಹುಡುಕಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...

    ReplyDelete
  24. ಶಿವು

    ನಿಘಂಟುವಿನ ಭಂಡಾರದಿಂದ ನನ್ನ ಪದಗಳ ಪರ್ಸ್ ಎಲ್ಲೋ ಕಿಂಚಿತ್ ತುಂಬಿದೆ ಅಷ್ಟೆ.ಅದರಿಂದ ಒಂದು ಹನಿ ನಿಮ್ಮ ಸಹಾಯಕ್ಕೆ ಬಂದದ್ದು ಸಂತೋಷ.

    ReplyDelete
  25. ಗೀತಾ
    ನಿನ್ನ ಹೆಸರನ್ನು ತಪ್ಪಾಗಿ ಬರೆದದ್ದಕ್ಕೆ ಕ್ಷಮೆಯಿರಲಿ. ಅದು ನನ್ನ ತಪ್ಪಲ್ಲ! ಕೀಬೋರ್ಡ್ ತಪ್ಪು!!

    ReplyDelete
  26. oh! no problem madam
    ನೀವು ಹೇಳಿದ ಮೇಲೆ ನಾನು ಗಮನಿಸಿದ್ದು!! ಮೊದಲು ಸರಿಯಾಗೇ ಓದಿಕೊಂಡು ಬಿಟ್ಟಿದ್ದೆ!

    ಮತ್ತು ಬರಹದ "ಭಾರ"ದ ಬಗ್ಗೆ ಚಿಂತಿಸದೆ ಪೋಸ್ಟ್ ಮಾಡಿ, ತೂಕ ಅಳೆಯಲು ನಿಮಗೆ ಎಷ್ಟೊಂದು ಓದುಗರಿದ್ದಾರಲ್ಲ :)

    ReplyDelete
  27. ನೀತಿಯುಕ್ತವಾದ ಕಥೆ ತುಂಬಾಚೆನ್ನಾಗಿ ಬರೆದಿದ್ದೀರಿ.
    ನನಗು ಜನಪದ ಮಹಾಭಾರತದ ಬಗ್ಗೆ ಕೇಳೋಣ ಅನ್ನಿಸಿ ಬಂದೆ,ಆದ್ರೆ ಇಲ್ಲಿ ಉತ್ತರ ಕೊಟ್ಟುಬಿಟ್ಟಿದ್ದೀರಿ. ತುಂಬಾ ಧನ್ಯವಾದಗಳು.
    ಮುಂದಿನ ಕಥೆಗಳ ಭಾರದ ಬಗ್ಗೆ ಯೋಚಿಸಬೇಡಿ .ನಾನಂತೂ ತಡವಾಗಿಯಾದ್ರು ಬರುತ್ತೇನೆ:-).

    ReplyDelete